Wednesday, October 26, 2011

ಹವ್ಯಕರ ಬದುಕು ಮತ್ತು ವಿವಾಹ - ಮನೋರಮಾ ಎಮ್. ಭಟ್

ಕಾಸರಗೋಡು ಸಹಿತವಾದ ಅಂದಿನ ದಕ್ಷಿಣ ಕನ್ನಡಲ್ಲಿರುವ ಬ್ರಾಹ್ಮಣರ ಒಂದು ವರ್ಗವನ್ನು ಹವ್ಯಕರೆಂದು ಕರೆಯುತ್ತಿದ್ದಾರೆ. ಹವ್ಯಕ ಬ್ರಾಹ್ಮಣರು ಉತ್ತರ ಕನ್ನಡಲ್ಲಿಯೂ ಇದ್ದಾರೆ. ಈ ಎರಡು ಹವ್ಯಕರ ಬದುಕು ಮತ್ತು ಕುಟುಂಬ ಜೀವನದಲ್ಲಿ ಅಲ್ಪ ಸ್ವಲ್ಪ ಭಿನ್ನತೆಯೂ ಇದೆ. ಅಂದರೆ ನಾವು ಮನೆಯಲ್ಲಿ ಆಡುವ ಭಾಷೆ, ನಮ್ಮ ಹೆಸರಿನ ಜೊತೆಗೆ ಇರುವ ಅಡ್ಡ ಹೆಸರು, ಜೀವನ ಕ್ರಮ, ಆರಾಧಿಸುವ ರೀತಿ ನೀತಿಗಳಲ್ಲಿ ವ್ಯತ್ಯಾಸವಿದೆ.

ದಕ್ಷಿಣ ಕನ್ನಡದ ಹವ್ಯಕರು ಸ್ಮಾರ್ಥರು, ಶಿವನ ಆರಾಧಕರು. ನಮ್ಮ ಕುಟುಂಬಕ್ಕೆ ಒಂದು ಗೋತ್ರವಿರುತ್ತದೆ- ವಶಿಸ್ಟ, ವಿಶ್ವಾಮಿತ್ರ, ಭಾರದ್ವಾಜ ಮುಂತಾದ ಋಷಿ ಮುನಿಗಳ ಹೆಸರುಗಳು ನಮ್ಮ ಗೋತ್ರವಾಗಿರುವುದು ಯಾಕೆ? ಬಹುಷಃ ನಮ್ಮ ಕುಟುಂಬದ ಮೂಲ ಪುರುಷರು ಅವರಾಗಿರಬಹುದೇ? ಅಥವಾ ನಮ್ಮ ಹಿರಿಯರು ಅವರ ಶಿಷ್ಯರಾಗಿರಬಹುದೇ? ಇನ್ನು ಒಂದು ಸಂಶಯ ನನ್ನ ಮನದಲ್ಲಿ ಬರುತ್ತದೆ. ಏಕೆ ಆ ಮುನಿ ಪುಂಗವರು ಒಬ್ಬ ಅನಾಥ ಗಂಡು ಮಗುವನ್ನು ದತ್ತ ಪುತ್ರನಾಗಿ ಸ್ವೀಕರಿಸಿರಬಾರದು. ಅವನ ಪೀಳಿಗೆಯವರನ್ನು ಆ ದತ್ತ ಪಿತನ ಹೆಸರಿನಿಂದಲೇ ಕರೆಯುತ್ತಿರಬಹುದೇ?

ಹವ್ಯಕರಲ್ಲಿ ಸಗೋತ್ರ ವಿವಾಹಗಳು ನಡೆಯಲು ಸ್ವಾಮಿಗಳ ಒಪ್ಪಿಗೆ ಇಲ್ಲ. ಆದರೂ ಪ್ರಾಯಶ್ಚಿತ್ತವಿಲ್ಲದ ತಪ್ಪುಗಳೂ ಇಲ್ಲವಲ್ಲ! ಈ ಸಗೋತ್ರ ಮದುವೆಯು ಕಾನೂನು (ಹವ್ಯಕರ) ರೀತಿಯಲ್ಲಿ ಒಪ್ಪಿಗೆಯಾಗ ಬೇಕಾದರೆ- ವಧುವಿನ ಹೆತ್ತವರು ತಮ್ಮ ವಿವಾಹಯೋಗ್ಯಳಾದ ಕನ್ಯೆಯನ್ನು ಬೇರೆಯ ಗೋತ್ರದವರಿಗೆ ದಾನ ನೀಡಿ - ಅವರಿಂದ ತಮ್ಮ ಮಗಳ ಕನ್ಯಾದಾನವನ್ನು ಮಾಡಿಸಿದ್ದೂ ಇದೆ. ಆದರೂ ಸೋದರಿಕೆಯ (ಅಣ್ಣನ ಮಗಳು + ಅಕ್ಕನ ಮಗ) ಸಂಬಂಧಗಳಿಗಿಂತ ಸಗೋತ್ರ ವಿವಾಹ ಖಂಡಿತ ಒಳ್ಳೆಯದೇ ಎಂದು ಬುದ್ಧಿವಂತ ಎಳೆಯರು ಹೇಳುತ್ತಿದ್ದಾರೆ.

ನಮ್ಮ ವಿವಾಹಕ್ಕೆ ಬಳಸುವ ಮಂತ್ರಗಳ ರೀತಿಗಳಿಗೆ ಸೂತ್ರಗಳಿವೆ (ಸೂತ್ರ ಅಂದರೆ ಸ್ಟೆಪ್ಸ್- ರೀತಿ, ದಾರಿ, ಇತ್ಯಾದಿ)- ಅಶ್ವಲಾಯನ ಮತ್ತು ಬೋಧಾಯನ ಸೂತ್ರಗಳು. ನಾವು ಬೋಧಾಯನ ಸೂತ್ರದಲ್ಲೇ ವಿವಾಹ ವಿಧಿಗಳನ್ನು ನೆರವೇರಿಸುತ್ತೇವೆ.
ಅಶ್ವಲಾಯನ ಮತ್ತು ಬೋಧಯನರು ವೈದಿಕ ವಿದ್ವಾಂಸರು. ನಮ್ಮ ವಿವಾಹಗಳು ನಡೆಸಲ್ಪಡುವಾಗ ನಮ್ಮ ವೈದಿಕರು ಬಳಸುವ ಮಂತ್ರಗಳನ್ನು ನಾವು (ಜನ ಸಾಮಾನ್ಯರು ಮತ್ತು ಚಿಂತನ ಶೀಲರು) ಕಿವಿಗೊಟ್ಟು ಆಲಿಸಬೇಕು. ನೀವೇ ಯೋಚಿಸಿ ಗೋತ್ರ, ಪ್ರವರ, ಆಸ್ತಿಯ ಹಕ್ಕು ಇತ್ಯಾದಿಗಳು ನಮ್ಮ ಜೀವನದಲ್ಲಿ ಪುರುಷನಿಂದಲೇ ಮುಂದಿನ ಪೀಳಿಗೆಗೆ ಹೋಗುತ್ತದೆಯಲ್ಲ. ಕನ್ಯಾದಾನವನ್ನು ಮಾಡಿದ ನಂತರ ನಿಮ್ಮ ಮಗಳು ತನ್ನ ಪತಿಯ ಗೋತ್ರ, ಕುಟುಂಬದ ಏಕ ವ್ಯಕ್ತಿಯಾಗಿ ಪತಿಗ್ರಹಕ್ಕೆ ಕಾಲಿಡುತ್ತಾಳೆ. ತಾನೇ ಕನ್ಯದಾನವನ್ನು ಕೊಟ್ಟ ನಂತರ ಅದನ್ನು ಪುನಃ ಆಕೆಯ ಹೆತ್ತವರಿಗೆ ಕಿತ್ತುಕೊಳ್ಳುವ ಅವಕಾಶ ಇದೆಯೇ- ಇಲ್ಲ, ಇಲ್ಲ ಖಂಡಿತವಾಗಿ ಇಲ್ಲ.

ಆದರೆ ವಿವಾಹದ ಮಂಟಪದಲ್ಲಿ ಹತ್ತು ಸಮಸ್ತರ ಎದುರಿನಲ್ಲಿ ಪ್ರತಿಜ್ಞಾ ಬದ್ಧನಾಗಿ ವರ ವಧುವಿನ ಕತ್ತಿಗೆ ಮಂಗಲ ಸೂತ್ರವನ್ನು ಕಟ್ಟುತ್ತಾ ಹೀಗೆ ಹೇಳುತ್ತಾನೆ "ಮಾಂಗಲ್ಯಂತಂತು ನಾನೇನ ಮಮ ಜೀವನ ಹೇತುನ, ಕಂಠೇ ಬದ್ನಾಮಿ ಸುಭಗೇ ತ್ವಂ ಜೀವ ಶರದಾ ಶತಂ".

ಓಹ್ .. ಎಂಥಾ ಸುಂದರ ಮಾತುಗಳು. ವಧುವಿನ ಹೃದಯಕ್ಕೆ ಎಷ್ಟು ಸಂತೋಷ, ತೃಪ್ತಿ, ಆನಂದವನ್ನು ನೀಡಿದ ಈ ಮಾತುಗಳಿಗೆ, ನಮ್ಮ ಸಮಾಜ ಒಂದು ನಿರ್ಧಿಷ್ಟ ಕಾಲಾವಧಿಯನ್ನು ನೀಡಿ, ಒಂದು ವೇಳೆ ಆಕೆ ಏಕಾಂಗಿಯಾಗಿರುವ ಸಮಯ ದುರದೃಷ್ಟದಿಂದ ಒದಗಿದರೆ, ಆ ಮಂಗಲಸೂತ್ರವನ್ನೂ, ಆಕೆಯ ಸುಮಂಗಲೀ ತನವನ್ನು ನಿರ್ದಯರಾಗಿ ಕಿತ್ತುಕೊಳ್ಳುವುದೇ? ವರನ ಹೇಳಿಕೆಗೆ ಬೆಲೆ ಇಷ್ತೆಯೋ?! ಇದಕ್ಕೆ ನಾನು ಎನ್ನೆನಲಿ?! (ಇದು ನನ್ನ ಜೀವನದ ಉದ್ದಕ್ಕೂ ಕಾಡುತ್ತದೆ). ಪ್ರೀತಿ, ಕರುಣೆ, ಪ್ರೇಮ, ಪರಸ್ಪರ ವಿಶ್ವಾಸದ ಸಹಜೀವನ ಗೌರವವನ್ನು ಕೊಟ್ಟು-ತೆಕ್ಕೊಳ್ಳುವುದು ಇಂಥಾ ಗುಣವುಳ್ಳ ನಮ್ಮ ಆತ್ಮ ಮತ್ತು ಪರಮಾತ್ಮ ಒಬ್ಬನೇ ಅಲ್ಲವೇ?!

ನಾವು ಜ್ಞಾನವನ್ನು ಬೆಳಸಿಕೊಳ್ಳೋಣ, ಒಳ್ಳೆಯವರಾಗಿ ಬಾಳೋಣ, ಸಹಜೀವನದಲ್ಲಿ ಕಷ್ಟ ಸುಖಗಳನ್ನು ಹಂಚಿ ಕೊಳ್ಳೋಣ, ನಾವಿಬ್ಬರು ಒಂದೇ ನಿನ್ನನ್ನು ನಾನು ಎಂದೆಂದೂ ಕೈ ಬಿಡಲಾರೆ, ನೀನು ನನ್ನ ಹೃದಯ ದೇವತೆ, ನನ್ನ ಮನೆಯ ಭಾಗ್ಯಲಕ್ಷ್ಮಿ. ಇಂಥಾ ಹೃದಯ ಸ್ಪರ್ಶಿ ಮಾತುಗಳ ವಾಗ್ದಾನವನ್ನು ನೀಡಿ, ವರ ವಧುವಿನ ಕೈ ಹಿಡಿದುಕೊಂಡು ಸಪ್ತಪದಿಯನ್ನು ತುಳಿಯುವಲ್ಲಿ ನಮ್ಮ ಹವ್ಯಕ ವಿವಾಹದ ಮುಖ್ಯ ವಿಧಿಗಳು ಮುಗಿಯುತ್ತದೆ. ಹವ್ಯಕರ ವಿವಾಹ ಸಂಪ್ರದಾಯಕ್ಕೂ ಇತರೇ ಬ್ರಾಹ್ಮಣ ವರ್ಗಗಳ ವಿವಾಹ ಸಂಪ್ರದಾಯಕ್ಕೂ ಇರುವ ವ್ಯತ್ಯಾಸವೇನೆಂದರೆ:
(೧) ಹವ್ಯಕರ ವಿವಾಹದಲ್ಲಿ ಸಾಕ್ಷಿಗೆ ಬರುವುದು 'ಜಲ', ಅಗ್ನಿ ಅಲ್ಲ.
(೨) ಹವ್ಯಕರಲ್ಲಿ ಹೋಮ ನಡೆಯುವುದು ತಾಳಿ ಕಟ್ಟಿದ ನಂತರ.
(೩) ಹವ್ಯಕರಲ್ಲಿ ಮಂಗಳಸೂತ್ರಕ್ಕೆ ಬಳಸುವುದು ಒಂದು ತಾಳಿ, ಆದರೆ ಇತರೇ ಬ್ರಾಹ್ಮಣ ವರ್ಗಗಳಲ್ಲಿ ಬಳಸುವುದು ಎರಡು ತಾಳಿ.

ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಹವ್ಯಕರ ಮಕ್ಕಳ ವಿವಾಹದಲ್ಲಿ "ವರದಕ್ಷಿಣೆ" ಎನ್ನುವ ಪದಗಳೇ ಬಳಕೆಯಲ್ಲಿಲ್ಲ. ಇದನ್ನಂತೂ ಇಲ್ಲಿನ ಹವ್ಯಕ ಹೆಣ್ಣು ಮಕ್ಕಳು ಬಹಳ ಸಂತೋಷದಿಂದ ನೆನಪಿಸುತ್ತಾರೆ, ಗೌರವಿಸುತ್ತಾರೆ. ಇದರಿಂದಾಗಿ ಹೆಣ್ಣು ಮಕ್ಕಳಿಗೆ ತಮ್ಮ ತವರಿನ ಸಂಬಂಧಗಳು ಬಹಳ ಶಾಶ್ವತವಾಗಿ ಉಳಿಯುತ್ತದೆ.

No comments: