Tuesday, October 25, 2011

ಹವ್ಯಕ ಮನೆತನದವರ- ಮನೆ ಹೆಸರು : ಮನೋರಮಾ ಎಮ್. ಭಟ್

ಒಂದೇ ಊರಿನಲ್ಲಿರುವ ಸಾವಿರಾರು ಮಂದಿ ಹವ್ಯಕರು ಒಂದೇ ಮನೆಯವರಾಗುವುದು ಸಾದ್ಯವಿಲ್ಲ ಅಲ್ಲವೇ? ಆದರೂ ನಮ್ಮ ಹಿರಿಯರು ಎಲ್ಲಿಯವರು, ಎಲ್ಲಿಂದ ಬಂದವರು ಎನ್ನುವ ಪ್ರಶ್ನೆಗಳು ಏಳುವುದು ಸಹಜತಾನೆ? ಅದನ್ನು ನಿರೂಪಿಸಲು ಸುಲಭವಾಗಲು ನಮ್ಮ ಹಿರಿಯರು ಕಂಡುಕೊಂಡ ದಾರಿಯೇ ಮನೆಯ ಮೂಲ ಸ್ಥಳ ಮತ್ತು ಅದರ ಹೆಸರು. ಉದಾಹರಣೆಗೆ, ನನ್ನ ಪತಿ ಮುಳಿಯ ಮಹಾಬಲಭಟ್ಟರು. ಆದರೆ ಅವರು ಹುಟ್ಟಿದ್ದು, ಬೆಳೆದದ್ದು, ವಿದ್ಯಾಭ್ಯಾಸಕ್ಕೆ ನಾಂದಿಯನ್ನು ಹಾಡಿದ್ದು ಮಂಗಳೂರಲ್ಲೇ. ಆದರೂ ಅವರ ಹೆಸರಿನ ಜೊತೆಗೆ ಮುಳಿಯ ಎನ್ನುವ ಹೆಸರು ಇದೆ. ಮನೆಯ ಹೆಸರಿಲ್ಲದೆ ನಮಗೆ ಅಸ್ತಿತ್ವವೇ ಇಲ್ಲ! ನಮ್ಮ ಮೊಮ್ಮಕ್ಕಳು ನಿಶಾಂತ್ ಹಾಗು ರೋಹಿತ್ - ಇಬ್ಬರೂ ಅಮೇರಿಕಾದ ನಿವಾಸಿಗಳೇ ಆದರೂ ಅವರು ಮುಳಿಯ ನಿಶಾಂತ್ ಹಾಗು ಮುಳಿಯ ರೋಹಿತ್. ಮುಲಿಯದಲ್ಲಿ ಇದ್ದವರು ಮಹಾಬಲಭಟ್ಟರ ಅಜ್ಜ. ಅಲ್ಲಿ ನಮಗೆ ಒಂದು ಇಂಚೂ ನೆಲವಿಲ್ಲ, ನಮ್ಮದಾಗಿಲ್ಲ. ಆದರೂ ಹೆಸರಿದೆ - ಅದೇ ದಕ್ಷಿಣ ಕನ್ನಡ ಜಿಲ್ಲೆಯ (ಕಾಸರಗೋಡು ಸಹಿತ) ಹವ್ಯಕ ಮನೆತನದವರ ವೈಶಿಷ್ಟ್ಯ.

ಕನ್ನೆಪಾಡಿ, ಕಡಂಬಿಲ, ಮೂಡಂಬೈಲು, ಮಾಜಿಬೈಲು, ಖಂಡಿಗ, ಉಪ್ಪರಿಗಳ, ಅಡಿಬಾಯಿ, ತುಳಮರ್ವ, ಶೇಡಿಗುಮ್ಮೆ , ಚೊಕ್ಕಾಡಿ, ಉಂಡೆಮನೆ, ನೆಲ್ಲಿಕುಂಜಗುತ್ತು, ಮಂಜಳಗಿರಿ, ಗಿಳಿಯಾಲು, ನುಚುಕ್ತಿ, ಸೇಡಿಯಾಪು, ಎಡನೀರು - ಇತ್ಯಾದಿ. ಇವುಗಳೆಲ್ಲಾ ಕೇವಲ ಸ್ಥಳಗಳ ಹೆಸರುಗಳು. ಈ ಸ್ಥಳಗಳಲ್ಲಿ ನಮ್ಮ ಪೂರ್ವಜರು ಇದ್ದು - ಬದುಕನ್ನು ಮುಂದುವರಿಸುತ್ತಾ, ಆ ಸ್ಥಳವು ಕಾನೂನಿನ ರೀತಿಯಲ್ಲಿ ಅವರವರದ್ದೇ ಹಿಂದೆ ಒಂದು ಕಾಲದಲ್ಲಿ ಆಗಿದ್ದರೆ ಮಾತ್ರ ಆ ಸ್ಥಳಗಳ ಹೆಸರುಗಳು ಒಂದು ಕುಟುಂಬದ ಹೆಸರಾಗಿ ನಿಲ್ಲುತ್ತದೆ. ಇದೆ ನಮ್ಮ ನಮ್ಮ ಮನೆತನಗಳ ಹೆಸರುಗಳಾಗಿ ನಿಂತಿವೆ. ಈ ಸಂದರ್ಭದಲ್ಲಿ ಡಿ. ವಿ. ಜಿ. ಅವರ ಒಂದು ಕಗ್ಗ ನೆನಪಾಗುತ್ತದೆ -

ಅಕ್ಕಿಯೊಳಗನ್ನವನು ಮೊದಲಾರು ಕಂಡವರು
ಅಕ್ಕರದ ಬರಹಕ್ಕೆ ಮೊದಲಿಗನದಾರು
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ
ದಕ್ಕುವುದೇ ಜಸ ನಿನಗೆ - ಮಂಕುತಿಮ್ಮ.

ಈ ಕಾರಣಕ್ಕಾಗಿ ನಾವು ನಮ್ಮ ಆದಿ ಮನೆಯನ್ನು, ಮೊದಲ ಬಂಧುಗಳನ್ನು ಮರೆಯಲೇ ಕೂಡದು. ಬಹುಷಃ ನಮ್ಮ ಮೂಲವನ್ನು ಹುಡುಕಿಕೊಡಲು ನಮ್ಮ ಮಕ್ಕಳು, ಮೊಮ್ಮಕ್ಕಳು, ಬಂದರೂ ಆಶ್ಚರ್ಯವೇನಿಲ್ಲ . ಇದೂ ದಕ್ಷಿಣ ಕನ್ನಡದ ಹವ್ಯಕ ಬಂಧುಗಳು ನಡೆದು ಬಂದ ದಾರಿಯ ಚಿಂತನೆಗಳ ವೈಶಿಷ್ಟ್ಯ.

No comments: