Tuesday, July 28, 2009

ಅಧ್ಯಾರೋಪ - ಅಪವಾದ: A teaching technique.

"ಅಧ್ಯಾರೋಪ" ವೆಂದರೆ ವಸ್ತುವಿನ ಮೇಲೆ ಅದರಲ್ಲಿ ನಿಜವಾಗಿಲ್ಲದ ಗುಣವನ್ನು ಆರೋಪಣೆ (Impose) ಮಾಡುವುದು. ಇಲ್ಲಿ "ಅಪವಾದ" ಎಂದರೆ ಹೇಳಿದ್ದನ್ನು ಅಳಿಸಿಹಾಕುವುದು. ಇದು ಒಂದು ಬೋಧನೋಪಾಯ. ಇದರ ವಿಧಾನ: ಒಂದು ವಸ್ತುವನ್ನು ಕುರಿತು ಏನೂ ತಿಳಿಯದವನಿಗೆ , ಆ ವಸ್ತುವನ್ನು ತಿಳಿಯಪಡಿಸಬೇಕಾದರೆ ಅವನಿಗೆ ತಿಳಿದಿರುವ ಪೈಕಿ ಯಾವ ವಸ್ತು ಉದ್ದಿಷ್ಟ ವಸ್ತುವಿಗೆ ಹತ್ತಿರವೋ, ಅಥವಾ ಹೋಲುತ್ತದೆಯೋ, ಅದರ ಗುರುತನ್ನು ಮೊದಲು ಹೇಳಿ ಅದು ಅವನ ತಿಳುವಳಿಕೆಗೆ ಬಂದ ಮೇಲೆ ಆ ಎರಡಕ್ಕೂ ಇರುವ ವ್ಯತ್ಯಾಸಗಳನ್ನು ತೋರಿಸುವುದು.

Basic Idea: ನಮ್ಮ ಹಳೆಯ ತಿಳಿವಳಿಕೆ ಹೊಸ ತಿಳಿವಳಿಕೆಗೆ ಅಡಿಗಲ್ಲು. ಹಿಂದಿನ ಅನುಭವದಿಂದ ಮುಂದಿನ ಅನುಭವಕ್ಕೆ ದಾರಿ.

ಉದಾಹರಣೆ: ಅರುಂಧತೀದರ್ಶನ.
ಹಿಂದೂ ಸಂಪ್ರದಾಯದಲ್ಲಿ ಮದುವೆಯ ದಿನ ಸಂಜೆ ವಧೂವರರಿಗೆ ಅರುಂಧತೀದರ್ಶನ ಮಾಡಿಸುವ ಸಂಪ್ರದಾಯ ಒಂದಿತ್ತು. ಅರುಂಧತಿಯು ಪತಿವ್ರತಾಧರ್ಮಕ್ಕೆ ಆದರ್ಶಳು. ಆದರೆ ಅದು ಬಹು ಸಣ್ಣ ನಕ್ಷತ್ರ. ಬೇಗ ಕಣ್ಣಿಗೆ ಸಿಗುವುದಿಲ್ಲ. ಆದ್ದರಿಂದ ಪುರೋಹಿತರು ಒಂದು ಉಪಾಯ ಮಾಡುತ್ತಾರೆ.
೧. ಮೊದಲು ಉತ್ತರದ ದಿಕ್ಕಿಗೆ ತಿರುಗಿ ಎನ್ನುತ್ತಾರೆ - ಅಧ್ಯಾರೋಪ , ಉತ್ತರ ದಿಕ್ಕು ಅರುಂಧತಿ ಅಲ್ಲಿ - ಅಪವಾದ
೨. ಸಪ್ತರ್ಷಿಗಳನ್ನೂ (Ursa major constellation) ತೋರಿಸುತ್ತಾರೆ - ಅಧ್ಯಾರೋಪ, ಸಪ್ತರ್ಷಿ ಮಂಡಲವು ಅರುಂಧತಿ ಅಲ್ಲಿ - ಅಪವಾದ
೩. ವಸಿಷ್ಠ ನಕ್ಷತ್ರ ವನ್ನು ತೋರಿಸುತ್ತಾರೆ (Zeta or Ursa major) - ಅಧ್ಯಾರೋಪ, ವಸಿಷ್ಟರ ಪತ್ನಿ ಅರುಂಧತಿ - ಅಪವಾದ
೪. ವಸಿಷ್ಟರ ಪಕ್ಕದಲ್ಲಿ ಇರುವ ನಕ್ಷತ್ರವನ್ನು ನೋಡಿ ಎನ್ನುತ್ತಾರೆ. - ಆಗ ಅರುಂಧತಿ ದರ್ಶನ ವಾಗುತ್ತದೆ.



ಈ ಬೋಧನೋಪಾಯವನ್ನು ಹೆಚ್ಚಾಗಿ ವೇದ ವೇದಾಂತಗಳಲ್ಲಿ ಪರಬ್ರಹ್ಮವಸ್ತುವನ್ನು ತಿಳಿಸುವ ಉದ್ದೇಶದಿಂದ ಬಳಸಲಾಗಿದೆ.

ವೇದಾಂತ ಹಾಗು ಗೀತೆಯಲ್ಲಿ, ಪರಬ್ರಹ್ಮ ವಸ್ತುವನ್ನು ತಿಳಿಯಲು ನಮಗೆಲ್ಲ ಪರಿಚಿತವಾಗಿರುವ ಪ್ರತ್ಯಕ್ಷ ಪ್ರಪಂಚದಿಂದ ಪ್ರಾರಂಭವಾಗುತ್ತದೆ ವಿಚಾರ. ಅದರಲ್ಲಿ ಕೆಲವು "ಅಧ್ಯಾರೋಪ" ಉದಾಹರಣೆಗಳು:
೧. ಜಗತ್ತೇ ಬ್ರಹ್ಮ. ಜಗತ್ತು ಬ್ರಹ್ಮ ಕಾರ್ಯ. ಕಾರ್ಯವೆಂಬುದು ಕಾರಣದ ರೂಪಾಂತರ.
೨. ಜಗತ್ತಿನಲ್ಲಿ ಜಡಪದಾರ್ಥಗಳನ್ನು ಸಚೇತನವಾಗಿ ಮಾಡುವುದು ಜೀವ. ಪ್ರತ್ಯಕ್ಷ ದೇಹದ ಒಳಗಡೆ ಗೂಢವಾಗಿ ಸೇರಿಕೊಂಡಿರುವ ಜೀವವು ಬ್ರಹ್ಮ ಚೈತನ್ಯದ ಅಂಶ. ಅದೇ ಬ್ರಹ್ಮ.
೩. ಜಗತ್ತನ್ನು ನಡೆಸಿ ಕಾಪಾಡುತ್ತಿರುವ ಪ್ರಭು ಈಶ್ವರ ಅವನೇ ಬ್ರಹ್ಮ.
೪. ಪ್ರಕೃತಿಯು ಬ್ರಹ್ಮದ ಅಂಗ.

ಹೀಗೆ ಬ್ರಹ್ಮ ವಿಷಯದ ಬಗ್ಗೆ ನಾನಾ ಅಧ್ಯಾರೋಪಗಳು ನಮ್ಮ ತಾತ್ವೀಕ ಸಾಹಿತ್ಯದಲ್ಲಿ ಕಾಣಬಹುದು. ಈ ಮೇಲಿನ ಅಧ್ಯಾರೋಪ ವಾಕ್ಯಗಳು ಅಸತ್ಯಗಳಲ್ಲ, ಭಾಗಶಃ ಸತ್ಯಗಳು. ಹಾಗೆ ಸತ್ಯಭ್ರಾಂತಿಗಳು. ಅವು ಪರಿಷ್ಕಾರವನ್ನು ಅಪೇಕ್ಷಿಸುತ್ತದೆ. ಆ ಪರಿಷ್ಕಾರಗಳು ಅಪವಾದ ವಾಕ್ಯಗಳಿಂದ ಆಗುತ್ತದೆ. ಹೀಗೆ ನಾನಾ ಅಧ್ಯಾರೋಪ - ಅಪವಾದ ಗಳಿಂದ ಬ್ರಹ್ಮವಸ್ತುವನ್ನು ತಿಳಿಯಲು ಸಾಧ್ಯ. ಆ ರಹಸ್ಯ ವಸ್ತುವನ್ನು ತಿಳಿಯಲು ಒಂದು ಉಪಾಯಸಾಧನವಿಲ್ಲದೆ ಹೇಗೆ ಸಾಧ್ಯವಾದೀತು ?

Wednesday, July 1, 2009

ಅಶ್ವತ್ಥ - Banyan Tree in Bhagavad Gita (Adhyaaya 15).

ಧರ್ಮವೆಂಬುದು ಒಂದು ಸಂಬಂಧವಿಧಾನ. ಸಂಬಂಧಗಳು ವಸ್ತುಗಳೆರಡರ ನಡುವೆ ಇರುತ್ತದೆ. ಧರ್ಮವೆಂಬ ಸಂಬಂಧದಲ್ಲಿ ಒಂದು ಕಡೆ ಜೀವ, ಇನ್ನೊಂದು ಕಡೆ ಜಗತ್ತು. ಈ ಸಂಬಂಧವನ್ನು ಅರ್ಜುನನಿಗೆ ತಿಳಿಸಲು ಭಗವಂತನು ಒಂದು ರೂಪಕ (metaphor) ವನ್ನು ಬಳಸುತ್ತಾನೆ. ಈ ಜೀವ, ಜಗತ್ತಿನ ಸಂಬಂಧವನ್ನು "ಸಂಸಾರ" ವೆನ್ನೋಣ. ಜೀವನದಲ್ಲಿ ನಮಗೆ ಯಾವ್ಯಾವುದರ ಸಂಪರ್ಕ ಉಂಟಾಗುತ್ತದೆಯೋ ಅವೆಲ್ಲ ಸಂಸಾರವೇ - "ಕರ್ಮಾನುಬಂಧೀನಿ". ಸಂಸಾರಕ್ಕೂ ಅಶ್ವತ್ಥ ಮರಕ್ಕೂ ಸಮಾನತೆ ಇದೆ ಎಂದು ಭಗವಂತ ತೋರಿಸುತ್ತಾನೆ.

ಒಂದು ಅಶ್ವತ್ಥದ (ಶ್ವ: ಎಂದರೆ ನಾಳೆ, "ಶ್ವಸ್ಥ" ಎಂದರೆ ಇಂದಿರುವಂತೆ ನಾಳೆ ಇರುವುದು, ಅಶ್ವಥ ಎಂದರೆ ಈ ದಿನವಿರುವಂತೆ ನಾಳೆ ಇರಲಾರದ್ದು [ಜಗತ್ತು ಎಂದರೂ ಇದೇ ಅರ್ಥ]) ಮರವಿದೆ, ಅದು ಎಂದೆಂದಿಗೂ ನಾಶವಾಗದ್ದು . ಅದರ ಬೇರು ತಲೆಯ ಕಡೆ ಇವೆ. ಕೊಂಬೆಗಳು ಕಾಲಿನ ಕಡೆ. ಅದರ ಎಲೆಗಳೇ ವೇದಗಳು. ಯಾರು ಅದನ್ನು ಬಲ್ಲನೋ ಅವನು ವೇದವನ್ನು ಬಲ್ಲನು. ಏಕೆಂದರೆ ಆ ವೃಕ್ಷದ ಮೂಲವಿರುವುದು ಶಾಶ್ವತ ಬ್ರಹ್ಮ ಚೈತನ್ಯದಲ್ಲಿ ಎಂದು ಅವನು ಬಲ್ಲನು.

ಆ ಮರದ ಕೊಂಬೆಗಳು ಮೇಲಕ್ಕೂ ಕೆಳಗೂ ಚಾಚಿಕೊಂಡಿವೆ. ಆ ಮರಕ್ಕೆ "ಸತ್ವ, ರಜಸ್ಸು, ತಮಸ್ಸು" ಗಳೆಂಬ ಗುಣಗಳೇ ಗೊಬ್ಬರ. ಭೋಗ್ಯ ವಿಷಯಗಳೇ ಅದರ ಚಿಗುರೆಲೆ. ಅದರ ಬಿಳಲು ಬೇರುಗಳು ಮನುಷ್ಯಲೋಕದಲ್ಲಿ ಪಾಶಗಳಾಗಿ ಹಬ್ಬಿಕೊಂಡಿವೆ.

ಸಂಸಾರಕ್ಕೂ ಅಶ್ವತ್ಥ ಮರಕ್ಕೂ ಇರುವ ಸಮಾನತೆ - ಬಹುಕಾಲಿಕತ್ವ, ಬಹುವಿಸ್ತೃತತ್ವ, ಬಹುಗ್ರಂಥಿಲತ್ವ, ಬಹುಪೋಷಕತ್ವ.
ಅಶ್ವತ್ಥವು ಅದೃಶ್ಯ ಬ್ರಹ್ಮದ ದ್ರಶ್ಯ ಪ್ರತೀಕ. ಈ ಭಾವನೆಯಿಂದಲೇ ಸಮಸ್ತ ಹಿಂದುಗಳೂ ಅದನ್ನು ಪವಿತ್ರವೆಂದು ನಂಬಿ ಪೂಜೆ ಪ್ರದಕ್ಷಿಣೆ ಮಾಡುವುದು. (or as westeners put "Worshipping Trees, stocks and stones")

ಮೇಲಿನ ವಿವರಣೆಯಲ್ಲಿ "ವೇದಗಳು ಆ ವೃಕ್ಷದ ಎಲೆಗಳು" ಎಂದು ಹೇಳಿದ್ದರೆ. ಇದರ ಅರ್ಥ ತಿಳಿದುಕೊಳ್ಳೋಣ. ಎಲೆಗಳು ವೃಕ್ಷವನ್ನು ಕಾಪಾಡುವು ಕೆಲಸವನ್ನು ಮಾಡುತ್ತದೆ. ಅದೇ ರೀತಿ ಸಂಸಾರಕ್ಕೆ ಧರ್ಮವು ಪೋಷಕ. ಆ ಧರ್ಮಕ್ಕೆ ಉಪಲಕ್ಷಣವೇ ವೇದ (ವೇದೋಖಿಲಂ ಧರ್ಮಮೂಲಂ). ಆದದ್ದರಿಂದ ಸಂಸಾರ ವೃಕ್ಷಕ್ಕೆ ಸಂರಕ್ಷಕವಾದದ್ದು ವೇದಶಾಸ್ತ್ರ ಪ್ರೇರಿತ ಧರ್ಮ.

ಕಡೆಯದಾಗಿ, ಗೀತೆಯ ಈ ೧೫'ನೆ ಅಧ್ಯಾಯದಲ್ಲಿ, ಅಶ್ವತ್ಥವನ್ನು ಕಡೆಯಬೇಕು ಎಂಬ ವಿವರಣೆ ಇದೇ. ಏನು ಇದರ ಅರ್ಥ? ಏಕೆ? ಹೇಗೆ?
ಇದಕ್ಕೆ ಒಂದೇ ವಸ್ತುವಿನ (ಆತ್ಮ) ಎರಡು ದಶೆಗಳನ್ನು (ಜೀವಾತ್ಮ, ಪರಮಾತ್ಮ) ತಿಳಿದಿದ್ದರೆ ಅರ್ಥ ಮಾಡಿಕೊಳ್ಳಲು ಸುಲಭ. ಈ ಅಂಕಣವನ್ನು ತಿಳಿಯುವುದಕ್ಕಾಗಿ ಈ ಎರಡನ್ನು - Kinetic Energy and Potential Energy, respectively, ಎಂದು ಅರ್ಥೈಸಿ ಮುಂದುವರಿಸೋಣ. ಮುಂದಿನ ಅಂಕಣದಲ್ಲಿ ಇದರ ಬಗ್ಗೆ ವಿವರವಾಗಿ ಬರೆಯುತ್ತೇನೆ (ಅಥವಾ "copy" ಮಾಡುತ್ತೇನೆ). ಈ ಎರಡರಲ್ಲಿ ಸಂಸಾರ ಸಂಪರ್ಕವಿರುವುದು ಜೀವ ದಶೆಗೆ. ಸಂಸಾರ ವೃಕ್ಷದೊಳಗೆ ಜೀವ ಸೇರಿಕೊಂಡಿದೆ. ಆ ವೃಕ್ಷದ ಮೂಲ ಪರಮೊತ್ತಮ ಸ್ಥಾನದಲ್ಲಿ, ಅದು ಬ್ರಹ್ಮವಸ್ತು ಹಾಗು ಪೂಜ್ಯವಾದದ್ದು. ಜೀವವು ಮೇಲಕ್ಕೆ ಹತ್ತಿ ಆ ಮೇಲ್ಭಾಗವನ್ನು ಸೇರಿಕೊಂಡರೆ ಆಗ ಆ ಮರದ ಹುಳಿಕಹಿಗಳಿಂದ, ಅದರ ಕೊಳೆನಾತಗಳಿಂದ, ಕ್ರಿಮಿ ಕೀಟಗಳಿಂದ, ಜೀವಕ್ಕೆ ಬಿಡುಗಡೆ. ಅದೇ ಮೋಕ್ಷ - ಅದನ್ನು ವಿವರಿಸಲೇ (ಮೇಲ್ಭಾಗವನ್ನು ಸೇರುವ ಕಾರ್ಯ) ಆ ವೃಕ್ಷವನ್ನು ಕಡಿಯಬೇಕು ಎಂದಿರುವುದು.

ಈ ಮರವನ್ನು ಕಡೆಯುವ ಕೊಡಲಿ - "ಅಸಂಗ" , ಅದೇ ಅಭಿಮಾನ ತ್ಯಾಗ, ಅದೇ ಮಮತಾತ್ಯಾಗ. ಆ ಕೊಡಲಿಯಿಂದ ಕೊಂಬೆಯನ್ನು ಕಡಿದು, ಆ ಪೊದೆ ಪಂಜರದಲ್ಲಿ ಕೊಂಡಿ ಮಾಡಿಕೊಂಡು ಅದರ ಮೂಲಕ ಹೊರಕ್ಕೆ ಹೊರಟು ಬ್ರಹ್ಮಾನುಭವ ಪದವಿಗೆ ದಾರಿ ಮಾಡಿಕೊಳ್ಳತಕ್ಕದ್ದು. "ಅಸಂಗ" ವು ಸರ್ವೋತ್ಕೃಷ್ಟ ಧರ್ಮ. ಆ ಧರ್ಮ ಪಾಲನೆಯಿಂದ ಕೊಂಬೆ ರೆಂಬೆಗಳು ನಮಗೆ ಪ್ರತಿಬಂಧಕಗಳಾಗದೆ ಅನುಕೂಲಗಳಾಗುತ್ತವೆ. ಅದರ ಮೂಲಕವೇ ನಾವು ಮೂಲವನ್ನು ಕಾಣಲು ಸಾಧ್ಯ.
"ಅಸಂಗ" ಎಂದರೆ: ಇದು ನನ್ನದಲ್ಲ, ಇದು ನನ್ನ ಭೋಗಕ್ಕೆ ಬೇಡ, ಇದರಿಂದ ನನ್ನ ಶೋಧನ ಚಿಕಿತ್ಸೆಯಾಗಲಿ. ಇದನ್ನು ಪಾಲಿಸುವುದೇ ಬ್ರಹ್ಮಾನ್ವೇಷಣೆಯ ದಾರಿ.


ಸಾರಂಶ:
೧. ಆ ಮರದ ಬೇರು ಮೂಲ ಮೇಲುಗಡೆ ಎಲ್ಲೂ! - ಸರ್ವೋನ್ನತ ಭಾಗದಲ್ಲಿ ಬುಡದ ಬೇರು
೨. ಕೊಂಬೆರೆಂಬೆಗಳು ಕೆಳಗಡೆ ನಮಗೆಟುಕುವಂತೆ - ಅಧೋಭಾಗದಲ್ಲಿ ಕೊಂಬೆದಳು
೩. ತ್ರಿಗುಣಗಳು ಅದಕ್ಕೆ ಗೊಬ್ಬರ.
೪. ಚಿಗುರುಗಳು ವಿಷಯಪ್ರವಾಲಾ : - ಹೊಸಹೊಸ ಭೋಗ ವಿಷಯಗಳು ವಿಧವಿಧವಾದ ಆಶೆಗಳು.
೫. ಬಿಳಲುಗಳು "ಕರ್ಮಾನುಬಂಧೀನಿ" (ನಮ್ಮನ್ನು ನಮ್ಮ ಕರ್ಮಗಳಿಂದಲೇ ಕಟ್ಟಿ ಹಾಕುವುದು) ಕ್ರಮವನ್ನು ಅನುಸರಿಸಿಕೊಂಡು ಹೋಗುತ್ತಿರುತ್ತವೆ.
೬.ಯಾವ ಬ್ರಹ್ಮವಸ್ತುವು ತತ್ವದಲ್ಲಿ - ಸ್ವಸ್ವರೂಪದಲ್ಲಿ ಸ್ಥಿರವೋ, ಏಕಾಕಾರವೋ , ನಿರ್ವಿಕಾರವೋ, ಅದು ಕಾರ್ಯದಶೆಯಲ್ಲಿ ಚಲನಶೀಲ, ಬಹುರೂಪಿ, ಸಂಸಾರವಿಕಾರಿ - ಅದಕ್ಕಾಗಿಯೇ ಅದನ್ನು "ಊರ್ಧ್ವಮೂಲಂ" ಎಂದಿರುವುದು.
೭. ಅಶ್ವತ್ಥವನ್ನು ಕಡಿಯಬೇಕು - ಅಸಂಗಶಸ್ತ್ರೇಣ