Thursday, December 27, 2007

Vivaahita Jeevanadalli TrimataacharaNe

ಇಲ್ಲಿ ತ್ರಿಮತ ಅಂದರೆ - ದ್ವೈತ, ವಿಶಿಷ್ಟಾದ್ವೈತ ಹಾಗು ಅದ್ವೈತ.

1. ಸ್ವತಾ – ಸಮರ್ಪಣ : ತನ್ನನ್ನು ಹಾಗೂ ತನ್ನ ಸರ್ವಸ್ವವನ್ನು ಸದಾ ಸಂಪೂರ್ಣವಾಗಿ “ಭಾಗವಾದರ್ಪಿತ” ಮಾಡುವುದರಲ್ಲಿಯೇ ಅತ್ಯಂತ ಸೌಖ್ಯವನ್ನು ಕಾಣುವುದು. – ದ್ವೈತ (ಶುಶ್ರೂಷಾ ಸಂತೋಷ)

2. ಸ್ವತಾ – ಸಹಭಾಗ : ತನ್ನನ್ನು ಭಗವಲ್ಲೀಲೆಯಲ್ಲಿ ಒಂದು ಅಂಶಾಪ್ರಾಯಾನಾಗಿ, ಆ ಲೀಲಾನಂದದಲ್ಲಿ ಭಾಗಸ್ತನಾಗಬೇಕೆನ್ನುವುದು. ತುತ್ತು ಕಲಸುವಗ ಕೈ ಬೇರೆ ಬಾಯಿ ಬೇರೆ; ನಾಲಗೆ ಅದನ್ನು ಸವಿದಾಗ ಕೈ ಬಾಯಿ ಎಲ್ಲಾ ಅಂಗಗಳು ಆ ಸುಖದಲ್ಲಿ ಭಾಗಿಗಳು. – ವಿಶಿಷ್ಟಾದ್ವೈತ (ಸಾಹಚಾರ್ಯ ಸಂತೋಷ)

3. ಸ್ವತಾ - ವಿಲಾಯನ : ತಾನು ಭಗವಂತನಲ್ಲಿ ಕರಗಿಹೋಗಿ, ತಾನು ಬೇರೆಯೆಂಬ ತನ್ನತನವನ್ನೇ ಕಳೆದುಕೊಳ್ಳುವುದು. – ಅದ್ವೈತ (ತದಾತ್ಮಸ್ಯ ಸಂತೋಷ)

ಈ ಮೂರು ಲಕ್ಷಣಗಳು ಒಂದು ವಿವಾಹಿತ ಜೀವನದಲ್ಲಿ ಗಂಡ ಹೆಂಡತಿಯ ನಡುವಿನ ಸಂಬಂಧ ಹಾಗು ಪ್ರೀತಿ ಭಾವನೆಗಳಲ್ಲಿ ಕಾಣಬಹುದು.

ದ್ವೈತ:

ಇದು ಸ್ವಾಮಿ-ಸೇವಕ ರೂಪವಾದದ್ದು – ಭಕ್ತಿ. ಭಕ್ತಿಗೆ ತೃಪ್ತಿಯು ಅಭಿವ್ಯಕ್ತಿಯಿಂದ. ಅದು ಮತ್ತೇನ್ನನ್ನು ಬೇಡುವುದಿಲ್ಲ. ತಾನು ಹರಿದು “ಇಷ್ಟಾಸ್ಥಾನವನ್ನು” ಸೇರುತ್ತಿರಬೇಕು. ಇದು ಪ್ರೀತಿಯ ಸ್ವಭಾವ. ಅಂದರೆ, ಪ್ರೇಮವು ಹೃದಯದಲ್ಲಿ ಉಕ್ಕಿಹರಿಯುತ್ತದೆ, ಆಗ ಅದನ್ನು ಆದರಿಸಿ ತೆಗೆದುಕೊಳ್ಳುವವರಿಲ್ಲದೇ ಹೋದಾಗ ಬಾಳು ಸಾವಿಗಿಂತ ಕೀಳಾಗುತ್ತದೆ. ನಾವು ಯಾವ (ಯಾರ) ವಿಷಯದಲ್ಲಿ ಭಕ್ತಿ ತೋರಿಸುತ್ತೇವೋ ಆ ವಿಷಯವನ್ನು ನಾವು ಅನುಭವಿಸಿದ (ಅವರು ಅದನ್ನು ಸ್ವೀಕರಿಸಿದ) ಆನಂದವೇ ಭಕ್ತಿಗೆ ಪ್ರತಿಫಲ. ಇಂಥಾ ಪ್ರೇಮಪರವಶತೆ ಯಾವ ಸಂದರ್ಭದಲ್ಲಿ ಪ್ರಧಾನಾಂಶವಾಗಿರುತ್ತದೆಯೋ ಅದು ದ್ವೈತ ತತ್ವ (ಅಂತದ್ದು ದ್ವೈತ ಆನಂದ). ಪ್ರಿಯನು(ಪ್ರೇಯಸಿಯು) ಪ್ರೇಯಸಿಗೆ (ಪ್ರಿಯನಿಗೆ) ಪ್ರೀತಿಸೇವೆ ಮಾಡಬೇಕು, ಪ್ರೇಯಸಿಯು (ಪ್ರಿಯನು) ಪ್ರಿಯನ (ಪ್ರೇಯಸಿಯ) ಸೇವೆಯನ್ನು ಅಂಗೀಕರಿಸಬೇಕು, ಅದೇ ಪ್ರಿಯನ (ಪ್ರೇಯಸಿಯ) ಸಂತೋಷ (ಸ್ವತಾ ಸಮರ್ಪಣ ಆನಂದ).

ನಿತ್ಯ ಗೃಹ ಕೃತ್ಯದಲ್ಲಿ ಸ್ತ್ರೀಕರ್ತವ್ಯಗಳೂ ಪುರುಷಕರ್ತವ್ಯಗಳೂ ಬೇರೆ ಬೇರೆಯಾಗಿರುತ್ತದೆ. ಊದಾಹರಣೆಗೆ (ಪಾಕ ಪರಿಚಾರ್ಯಾದಿ ವಿಷಯಗಳಲ್ಲಿ ಆಕೆ ಸೇವಾಕಿ, ಆತನು ಸ್ವಾಮಿ). ಕುಟುಂಬ ಭರಣಾದಿ ವಿಷಯಗಳಲ್ಲಿ ಅವನು ಸೇವಕ, ಆಕೆ ಸ್ವಾಮಿಣಿ. ಹೀಗೆ ನಿತ್ಯಗಟ್ಟಲೆಯ ಜೀವನವೂ ದ್ವೈತ ಮರ್ಯಾದೆಯದು. ಅದರಲ್ಲಿ ಒಬ್ಬರಿಗಿನ್ನೊಬ್ಬರ ವಿಷಯದಲ್ಲಿರುವ ಪ್ರೀತಿ ಭಯ ಗೌರವಗಳು ಅವನ ಅಥವಾ ಅವಳ ಅಹಂತೆಯ ದರ್ಪವನ್ನು ಸವೆಯಿಸುತ್ತವೆ.

ತಾಸ್ಮೈವಾಹಂ: ನಾನು ಅವನಿಗೆ ಸೇರಿದವನು. – ದ್ವೈತ.

ವಿಶಿಷ್ಟಾದ್ವೈತ:

ಸದಾ ಪ್ರಿಯ-(ಸಹಾಚಾರ್ಯ) ಒಂದನ್ನೇ ಬೇಡುವುದು. ಪ್ರಣಯದ ದಾನಾದಾನಾ ದಿಂದಲೇ ಅವರ ಆನಂದ. ಪ್ರಿಯನು (ಪ್ರೇಯಾಸಿಯೂ) ಪ್ರೇಯಸಿಯ (ಪ್ರಿಯನ) ಸಾನ್ನಿಧ್ಯದಲ್ಲಿ ತನ್ನ ಪ್ರತ್ಯೇಕತ್ವವನ್ನು ಕಳೆದುಕೊಳ್ಳುತ್ತಾನೆ (ಕಳೆದುಕೊಳ್ಳುತ್ತಾಳೆ). ಪರಸ್ಪರ ನೀತಿ ಭೋಧನೆ, ಜಗಳ ಇತ್ಯಾದಿ ಜೀವನದಲ್ಲಿ ಸಹಜ. ಇಂಥಾ ಸಲಿಗೆ, ಅನ್ಯೋನ್ಯ ಅಧಿಕಾರ, ಅನ್ಯೋನ್ಯ ಸ್ವಾತಂತ್ರವೇ ಅಂತರಂಗೈಕ್ಯದ ಲಕ್ಶಣ. ಅದೇ ಸ್ವತಾ-ಸಹಭಾಗಿತ್ವ. ಗಂಡ ಹೆಂಡಿರು ಒಬ್ಬರಿಗಿನ್ನೊಬ್ಬರು ಸಮಾನರೇ; ಆದರೂ ಹೆಂಡತಿ ಗಂಡನನ್ನು ಮನಸಾ ಗೌರವಿಸುತ್ತಳೆ. ಇದು ಕಿಂಚಿತ್-ಭೇದಗರ್ಭಿತವಾದ ಅಭೇದ. ಯಾವ ಸಂಧರ್ಭಗಳಲ್ಲಿ “ಎಕತ್ವದಲ್ಲು ದ್ವಿತ್ವದ ಮರ್ಯಾದೆ” ಲಕ್ಶಣಗಳು ಕಾಣಿಸುತ್ತವೊ ಅಲ್ಲಿ “ವಿಶಿಷ್ಟಾದ್ವೈತ” ಗುಣ ಎತ್ತಿ ತೋರುತ್ತದೆ.

ದೈವ ಪೂಜೆ, ಬಂಧು-ಉಪಚಾರ, ವಿವಾಹ-ಉತ್ಸವ, ಇತ್ಯಾದಿಗಳಲ್ಲಿ ಇಬ್ಬರಿಗೂ ಅಂಶ-ಆಂಶಿ ಭಾವ. ಇಬ್ಬರಲ್ಲಿ ಯಾರೊಬ್ಬರೂ ಸ್ವಾತಂತ್ರಿಸಿ ಕೆಲಸ ನಡೆಸುವ ಹಾಗಿಲ್ಲ, ಇಬ್ಬರೂ ಬೇಕು. ಸಹಭಾಗಿತ್ವವೂ ಇಲ್ಲಿಯ ಮರ್ಯಾದೆ. ಅದೇ ವಿಶಿಷ್ಟಾದ್ವೈತದ ಮಾರ್ಗ.

ಮಮೈಿವಾಸ್ೌ: ಆವಳ ಮೇಲೆ ನನ್ನೊಬ್ಬನಿಗೆ ಹಕ್ಕು. ನಾನು ಮತ್ತೆ ಇನ್ನೊಂದು ಎಂಬ ಸ್ಮರಣೆ ಉಂಟು, ಆದರೆ, ಇನ್ನೊಂದರಲ್ಲಿ ನಾನು ಎಂಬುದು ಅಡಗಿಕೊಂಡಿದೆ ಎಂಬ ಸಂತೋಷ ಉಂಟು. - ವಿಶಿಷ್ಟಾದ್ವೈತ

ಅದ್ವೈತ:

ಅದ್ವೈತ ಭಾವನೆಯು ಪ್ರಣಯಾನುಭವದ ಪರಮೋನ್ನತಿ. ಬ್ರಹದಾರಣ್ಯಕೊಪನಿಶತ್ತಿನಲ್ಲಿ ಹೀಗೆ ಒಂದು ವರ್ಣನೆ ಇದೆ. ಇದು ಸತಿ-ಪತಿಯರ ಉಭಯೈಕ್ಯದ ನಿದರ್ಶನ. “ಪ್ರಿಯೆಯ ಗಾಢಾಲಿನ್ಗನದಲ್ಲಿರುವಾತನಿಗೆ ಹೊರಗಿನದೆಂಬುದರ ನೆನಪಿಲ್ಲ. ಒಳಗಿನದೆಂಬುದರ ನೆನಪಿಲ್ಲ. ಅವನು ತನ್ನ ಇಷ್ಟಾರ್ಥವು ಕೈಗೂಡಿದ್ದರಿಂದ ಆಸೆಗಳಿಲ್ಲದವನು. ಶೋಕದಿಂದ ದೂರವಾದವನು. ಆಗ ಅವನಿಗೆ ಯಾವ ಬಂಧುವಿನ ಸ್ಮೃತಿಯೂ ಯಾವ ಲೋಕ ಸಂಬಂಧದ ಸ್ಮೃತಿಯೂ ಇರುವುದಿಲ್ಲ. ಎಲ್ಲಾ ಅಖಂಡೈಕ್ಯವಾಗಿರುತ್ತದೆ”. ಇದೆ ಸ್ವತಾ-ವಿಲಾಯನ.

ಅತ್ಯಂತ-ಆಪ್ತತೆಯ ಹೊತ್ತಿನಲ್ಲಿ ಗಂಡ ಹೆಂಡತಿ ಬೇರೆ-ಬೆರೆತನ ಮರೆತು ಹೋಗುತ್ತಾರೆ. ಅದೇ ಸ್ವತೆಯ ಪೂರ್ಣ ವಿಲಾಯನ. ಜೀವನ ಜೀವತವು ಕರಗಿ ಹೋದಾಗ ಉಳಿಯುವುದು ಆತ್ಮ ಒಂದೇ. ಇದೆ ಅದ್ವೈತ ಭಾವನೆ.

ಸ ಏವಾಹಂ: ನಾನೇ ಅವಳು ಅವಳೆ ನಾನು. ಎರಡು ಎಂಬುದಿಲ್ಲ. ಇದು ಅದ್ವೈತ.

PS: ಪ್ರಣಯವು ಪ್ರಾರಂಭದಲ್ಲಿ “ದ್ವೈತ”, ಸರಸ ಸಲ್ಲಾಪಗಳಲ್ಲಿ “ವಿಶಿಷ್ಟಾದ್ವೈತ” ; ಪ್ರಣಯ ಶಿಖರದಲ್ಲಿ “ಅದ್ವೈತ”.

Saturday, November 24, 2007

eeshopanishattu - Shanti Paata

ಪೂರ್ಣಮದ: ಪೂರ್ಣಮಿದಂ
ಪೂರ್ಣಾತ್ ಪೂರ್ಣಮುದಚ್ಯತೇ
ಪೂರ್ಣಸ್ಯ ಪೂರ್ಣಮಾದಾಯ
ಪೂರ್ಣಮೇವಾವಶಿಷ್ಯತೇ

ಪೂರ್ಣ - ಸಂಪೂರ್ಣ, ಕೊರತೆ ಇಲ್ಲದ್ದು; ಉದಚ್ಯತೇ - ಹೊರಟು ಬಂದಿದೆ; ಅವಶಿಷ್ಯತೇ - ಉಳಿದುಕೊಳ್ಳುತ್ತದೆ.

"ಪೂರ್ಣನಾದವನು ಈಶ್ವರ; ಪೂರ್ಣವಾದದ್ದು ಜಗತ್ತು. ಆ ಪೂರ್ಣದಿಂದ ಈ ಪೂರ್ಣ ಬಂದಿದೆ. ಪೂರ್ಣವಾದದ್ದರಿಂದ ಪೂರ್ಣವಾದದ್ದನ್ನು ತೆಗೆದಮೇಲೆ ಉಳಿದಿರತಕ್ಕದ್ದು ಪೂರ್ಣವೇ" - ಒಂದರ ಪೂರ್ಣತೆ ಇನ್ನೊಂದರ ಅಸ್ತಿತ್ವದಷ್ಟು ಮಟ್ಟಿಗೆ ನ್ಯೂನವಾಗುತ್ತದೆ. ಹಾಗಾದರೆ ಬ್ರಹ್ಮ, ಜಗತ್ತು - ಈ ಎರಡು ಹೇಗೆ ಪೂರ್ಣಗಳು? ಅವುಗಳ ಇರ್ತನ - ಎರಡಾಗಿರುವಿಕೆ - ಬರಿಯ ದ್ರುಶ್ಯವೇ ವಿನಹ ವಾಸ್ತವವಲ್ಲ. ಈ ಉಭಯವೂ ಏಕೈಕ ತತ್ವವೇ, ಭಿನ್ನಗಳಲ್ಲ. ಅವುಗಳ ಆಕೃತಿಯೂ, ಅವಸ್ಥೆಯೂ ಬೇರೆಬೇರೆ.

This can also be understood considering the three laws of casuality (as quoted by Swami Chinmayananda). The three laws are
1. There can't be an effect without a cause
2. Effect is nothing but Cause in different forms.
3. If you remove the Cause from the Effect - NOTHING remains - only thing that remains is what you have removed.

ಈಶ್ವರನು ಕಾರಣ (Cause) ಜಗತ್ತು ಕಾರ್ಯ (Effect).

Thursday, November 22, 2007

Eeshopanishattu

ವೇದದ ವಿಷಯವು ತ್ರಿಕೂಟ ಸ್ವರೂಪ - ಜೀವ, ಜಗತ್ತು, ಈ ಎರಡಕ್ಕೂ ಅನುಭವ ಸಂಬಂಧವನ್ನು ಕಲ್ಪಿಸುವ ತತ್ವ. ವೇದವು ವಿಷಯ ವೆಶೇಷದ ದೃಷ್ಟಿಯಿಂದ ಸ್ಥೂಲವಾಗಿ (Big Picture of Classification) ಮೂರು ಭಾಗಗಳುಳ್ಳದ್ದಾಗಿದೆ.

೧. ಸಂಹಿತೆ - ಬಾಹ್ಯಜಗತ್ತಿನಲ್ಲಿ ಕಾಣಬಂದ ಪ್ರಕೃತಿಯ ಅಧ್ಭುತಗಳನ್ನು ನೋಡಿ ಬೆರಗಾಗಿ, ಆ ಅಧ್ಭುತಶಕ್ತಿಗಳನ್ನು ದೇವತೆಗಳೆಂದು ಭಾವಿಸಿ ಕೊಂಡಾಡಿರುವ ಭಾಗ.
೨. ಬ್ರಾಹ್ಮಣ - ನಾನಾ ದೇವತೆಗಳನ್ನು ಒಲಿಸಿಕೊಳ್ಳಲು ಮಾಡಬೇಕಾದ ಪೂಜೆ ಪುನಸ್ಕಾರಗಳ ವಿಧಾನಗಳನ್ನು ಕುರಿತ ಭಾಗ.
೩. ಉಪನಿಷತ್ತು - ಆ ನಾನಾ ದೇವತೆಗಳಿಗೆ ಶಕ್ತಿಪ್ರದವೂ ಆಗಿ, ಒಂದು ಮಹಾ ದೈವವಿರುತ್ತದೆಯೆಂದು ಸಿದ್ಧಾಂತಿಸಿ, ಆ ಮಹಾ ಸತ್ವವೆ ಜಗದೇಕಮೂಲವೆಂದು, ಶಾಶ್ವತವೆಂದು, ಉದ್ದೇಶಿಸಿ, ಆ ಪರತತ್ವಕ್ಕೂ ಮನುಷ್ಯನ ಜೀವಕ್ಕೂ ಇರುವ ಸಂಬಂಧವನ್ನು ತಿಳಿಸಿಕೊಡುವ ಭಾಗ. ಇದೇ ವೇದಾಂತ - ವೇದದ ಕಡೆಯ ಮಾತು.

ವೇದವನ್ನು ವಿಷಯದ ದೃಷ್ಟಿಯಿಂದ - ಕರ್ಮಕಾಂಡ (ಸಂಹಿತೆ, ಬ್ರಾಹ್ಮಣ), ಜ್ಞಾನಕಾಂಡ (ಉಪನಿಷತ್ತು) - ಎಂದು ವಿಭಾಗಿಸುವುದೂ ಉಂಟು. ಬ್ರಾಹ್ಮಣ ವೇದಭಾಗಕ್ಕೂ ಉಪನಿಷತ್ತಿಗೂ ನಡುವೆ ಸೇತುವೆಯಂತೆ ಅರಣ್ಯಕವೆಂಬ ವೇದಭಾಗವಿರುತ್ತದೆ. ವಾಸ್ತವವಾಗಿ ವೇದದ ಒಂದು ಭಾಗಕ್ಕೂ ಇನ್ನೊಂದು ಭಾಗಕ್ಕೂ ನಡುವೆ ಗೋಡೆ ಕಂದಕಗಳೇನೂ ಇಲ್ಲ. ಅಂದರೆ ಉಪನಿಷತ್ತುಗಳ ತಾತ್ಪರ್ಯ ಸಂಹಿತೆ ಬ್ರಾಹ್ಮಣ ಭಾಗಗಳಲ್ಲೂ ಬರುತ್ತದೆ.

ಉಪನಿಷತ್ತು:
ಉಪನಿಷತ್ತು ಎಂಬ ಮಾತಿಗೆ ಎರದರ್ಥ - ೧. ಸಮೀಪಕ್ಕೆ ಕರೆದುಕೊಂಡು ಹೋಗಿ ತಲುಪಿಸುವುದು ೨. ಸಮೀಪದಲ್ಲಿ ನಿಷ್ಠೆಯಿಂದ ಕುಳಿತಿರುವಂತೆ ಮಾಡುವುದು.

ಇದು ಶಾಸ್ತ್ರಪ್ರಬಂಧವಲ್ಲ, ಇದು ಅವುಗಳಿಗೆ ಮೂಲ ಸಾಮಗ್ರಿ. ಇದರಲ್ಲಿ, ಶಾಸ್ತ್ರ ಗ್ರಂಥಗಳಲ್ಲಿ ಕಾಣಬರುವ ಕ್ರಮ ವ್ಯವಸ್ಥೆ, ಪ್ರಕರಣ ವಿಭಾಗ, ತರ್ಕಸರಣಿ, ಕಾಣಬಾರದು. ಇದು ಒಂದು ಕಡೆ ಕಾವ್ಯ, ಒಂದು ಕಡೆ ಶಾಸ್ತ್ರ. ಉಪನಿಷತ್ತುಗಳು ೧೦೮ ಪ್ರಸಿದ್ದವಾದವು. ಅವುಗಳಲ್ಲಿ ಹತ್ತು ಪರಮ ಪ್ರಮಾಣಗಳೆಂದು ಗಣ್ಯವಾಗಿ, ತ್ರಿಮತಾಚಾರ್ಯರುಗಳ (ದ್ವೈತ, ಅದ್ವೈತ, ವಿಶಿಷ್ಟಅದ್ವೈತ) ಭಾಷ್ಯಕ್ಕೆ ವಿಷಯಗಳಾಗಿವೆ - ಈಶ, ಕೇನ, ಕಠ , ಪ್ರಶ್ನ, ಮುಂಡ, ಮಾಂಡೂಕ್ಯ, ತಿತ್ತಿರಿ: , ಐತರೇಯಂ, ಛಾಂದೋಗ್ಯಂ, ಬೃಹದಾರಣ್ಯಕಂ.


ಈಶೋಪನಿಷತ್ತಿನ ಉಪದೇಶ:

ಪ್ರವೃತ್ತಿ ಹಾಗು ನಿವೃತ್ತಿ ಎರಡರ ಸಮನ್ವಯವನ್ನು ಭೋಧಿಸಿರುವುದೇ ಈಶೋಪನಿಷತ್ತಿನ ವಿಶೇಷ ಗುಣ. ಪುರುಷಾರ್ಥದ ಸಾಧನೆಗೆ, ಬ್ರಹ್ಮದರ್ಶನಕ್ಕೆ - ಕರ್ಮಮಾರ್ಗ ತಕ್ಕದೆ ಅಥವಾ ಜ್ಞಾನಮಾರ್ಗ ತಕ್ಕದೆ? - ಜ್ಞಾನಮಾರ್ಗ ಎಂದರೆ - ನಿವೃತ್ತಿ, ಸನ್ಯಾಸ, ವೈರಾಗ್ಯ. ಕರ್ಮಮಾರ್ಗ ಎಂದರೆ - ಸಂಸಾರ, ಪ್ರವೃತ್ತಿ, ಸಮಗ್ರ ಧರ್ಮ ಶಾಸ್ತ್ರ ವಿಹಿತ ಕರ್ಮ. ಮೋಕ್ಷಕ್ಕೆ ಜ್ಞಾನ ಬೇಕು, ಜ್ಞಾನಕ್ಕೆ ಕರ್ಮ ಬೇಕು. ಕರ್ಮವು ಜ್ಞಾನಕ್ಕೆ ದಾರಿಮಾಡಬೇಕಾದರೆ ಅದು ಸ್ವಾರ್ಥ ಸ್ಪರ್ಶವಿಲ್ಲದ ಕರ್ಮವಾಗಿರಬೇಕು. ಅಂದರೆ - ಬದುಕಬೇಕು, ಭೋಗವೇ ದೊಡ್ಡದೆಂದುಕೊಳ್ಳದೆ ಬದುಕಬೇಕು. ಲೋಕ ಕಾರ್ಯಗಳನ್ನು ಮಾಡಬೇಕು, ಸ್ವಾರ್ಥದ ಸೊಂಕಿಲ್ಲದೆ ಮಾಡಬೇಕು. ಸಂತೋಷ ಪಡಬೇಕು, ಅಹಂಕಾರ ಮಮಕಾರಗಳನ್ನು ತೊರೆದು ಸಂತೋಷಪಡಬೇಕು. ಪ್ರವೃತ್ತಿ ಇಲ್ಲದೆ, ಲೌಕಿಕ ಜೀವನವಿಲ್ಲದೆ, ಅಂತರಂಗ ಶೋಧನೆ ಇಲ್ಲ. ಅಂತರಂಗ ಶೋಧನೆ ಇಲ್ಲದ ನಿವೃತ್ತಿಗೆ ಸಾರ್ಥಕ್ಯ ಇಲ್ಲ. ಅಂಥ ಪರಿಶುದ್ದ ನಿವೃತ್ತಿ ಇಲ್ಲದೆ ತತ್ವ ಸಾಕ್ಷಾತ್ಕಾರ ಇಲ್ಲ. ತತ್ವ ಸಾಕ್ಷಾತ್ಕಾರ ಇಲ್ಲದೆ, ಮನುಷ್ಯನಿಗೆ ಲೋಕ ಜೀವನದ ದ್ವಂದ್ವ ಜಾಲಿಕೆಯಿಂದ ಬಿಡುಗಡೆ ಇಲ್ಲ. ಲೋಕಾಸಕ್ತಿ, ಸ್ವಾರ್ಥವಿರಕ್ತಿಗಳನ್ನು ಜೋಡಿಸಿ ಬಾಳಬಲ್ಲವನೆ ಯೋಗಿ.

Thursday, November 15, 2007

Ruta Satya Dharma

ಈ ಭಾಗವನ್ನು DVG ಅವರ "ಋತ, ಸತ್ಯ ಮತ್ತು ಧರ್ಮ" ಎಂಬ ಪುಸ್ತಕದಿಂದ ಬರೆದಿದ್ದೇನೆ.

ಋತ:
ಋತ ಶಬ್ಧದ ಅರ್ಥಗಳು:
೧. ಮೊದಲು ಮನಸ್ಸು ತಾನೇ ಸ್ವತಂತ್ರವಾಗಿ ಮಾಡುವ ಕಾರ್ಯ. ನೈಜ ಪ್ರವೃತ್ತಿ, ಸ್ವತಂತ್ರವಾದ ನಡವಳಿಕೆ. ಋ - ಎಂಬುದು "ಗತಿ" (ಚಲನೆ) ಎಂಬರ್ಥದಲ್ಲಿ.
೨. ಚರಾಚರ ಜಗತ್ತಿನ ಸ್ಥಿತಿ ಚಲನೆಗಳಲ್ಲಿ ಕಾಣಬರುವ ಕಟ್ಟುಪಾಡನ್ನು ವೇದದಲ್ಲಿ ಋತ ಎಂದು ಬಳಕೆಯಲ್ಲಿದೆ. ಇದನ್ನು ಇತರರು ಬದಲಾಯಿಸುವಂತಿಲ್ಲ. - ಸರ್ವಕಾಲಗಳಲ್ಲೂ ಇರತಕ್ಕದ್ದು (ಸತ್ಯ).
೩. ಕರ್ಮ-ಫಲ ಸಂಬಂಧ ಮತ್ತು ಋಣ-ಋಣಿ ಸಂಬಂಧ.
೪. ಯಜ್ಞ, ಯಾಗ ಪೂಜಾ ವಿಧಾನಗಳು ಮತ್ತು ಅದರಲ್ಲಿ ಬಳಸುವ ನೀರು, ಬೆಂಕಿ, ಮೂದಲಾದ ಪವಿತ್ರ ದ್ರವ್ಯಗಳು.

ಆದರೆ ಋತ ಎಂಬ ಶಬ್ಧಕ್ಕೆ ಬಹಳ ಹಿಂದಿನ ಅರ್ಥ - "ಸ್ವಾಭಾವಿಕ ಸಂಗತಿ" ಅಥವಾ "ಸತ್ಯ ಬೀಜ". ಮನಸ್ಸಿನೋಳಗಡೆ ಕೃತಿಮವಿಲ್ಲದೆ ಇರುವಾಗ, ಮತ್ತು ಹೊರಗಡೆಯಿಂದ ಅದರ ಮೇಲೆ ಯಾವ ಪ್ರಭಾವವೂ ಮೀಳದಿರುವಾಗ ಒಂದಾನೊಂದು ವಿಷಯವನ್ನು ಕುರಿತು ಆ ಮನಸ್ಸಿನಲ್ಲಿ ಯಾವ ಭಾವನೆ ಹುಟ್ಟುತ್ತದೆಯೋ ಅದು "ಋತ".

ಸತ್ಯ ಮತ್ತು ಧರ್ಮ:
ಸತ್ಯವೆಂದರೆ "ಇರುವ" (ಕಾಲಭೇದ, ದೇಶಭೇಧಗಳಿಂದ ರೂಪಗೆಡದೆ) ಸಾಮರ್ಥ್ಯ ಉಳ್ಳದ್ದು. ಧರ್ಮವೆಂದರೆ ಒಂದಾನೊಂದು ವಸ್ತುವನ್ನು ಆ ವಸ್ತುವನ್ನಾಗಿ ಧರಿಸಿರುವ - ಎಂದರೆ ಉಳಿದಿರುವ ಗುಣ ಅಥವಾ ಲಕ್ಷಣ (ಧಾರಣೆ) ಅದೇ ಅದರ ತತ್ವ - ಅದರ ಅದಾಗಿರುವಿಕೆ.

ಋತ + ಸತ್ಯ + ಧರ್ಮ
ಋತವೆಂಬುದು ಸತ್ಯವೆಂಬ ವೃಕ್ಷದ ಆದಿಮೂಲ. ಋತವೇ ಲೋಕಸಂಪರ್ಕದಿಂದ ಸತ್ಯವಾಗುತ್ತದೆ. ಸತ್ಯವೆಂಬುದು ಋತದ ಸಮೃದ್ದ ದಶೆ (Development). ಋತದ ವಾಗ್ರೂಪ ಸತ್ಯ (ಸತ್ಯದ ಕಾರ್ಯರೂಪ ಧರ್ಮ). ಆದ್ದರಿಂದ ಧರ್ಮದ ಅಡಿಪಾಯ ಋತ. ಋತ ಎಂಬುದರ ಮೂಲಾರ್ಥದಲ್ಲಿ ಸತ್ಯವೆಂಬುದು ಮಾತ್ರವಲ್ಲದೆ ಕರ್ಮಫಲವಿಶಯವಾದ ಋಣಬಂಧನವಿಧಿ ಎಂಬುದೂ ಸೇರಿರುತ್ತದೆ. - ನೈಜ ಚರ್ಯೆ ಮತ್ತು ತಜ್ಜನಿತ ಫಲ (ಸಹಜ ವಸ್ತು ಮತ್ತು ತದ್ವಸ್ತು ಕಾರ್ಯ). ಈ ಸರಪಣಿಯೇ ಋತ. ಇದರಿಂದ ತಪ್ಪಿಸಿಕೊಳ್ಳುವುದು ಸಾದ್ಯವಲ್ಲದ ಕಾರಣ ಅದು ಒಂದು ನಿಯಮ. ಆದ್ದರಿಂದ, ಅದು ಒಂದು ಧರ್ಮ.

ಹೀಗೆ - ಋತ (ಅಂತರಂಗದ ಯಥಾರ್ಥ) ಮತ್ತು ಸತ್ಯ (ಬಹಿಸ್ಸಾಧಿತ ಯಥಾರ್ಥ - ಹೊರ ಪ್ರಪಂಚದಿಂದ ನಾವು ಸಾಧಿಸಿಕೊಂಡ ತಿಳಿವಳಿಕೆ) ಎರಡೂ ನಮ್ಮ ಸರಿಯಾದ ನಡವಳಿಕೆಗೆ (ಧರ್ಮ) ಅವಶ್ಯವಾದವು.

Monday, November 12, 2007

Samskruti?

ಇದನ್ನು DVG ಅವರ "ಸಂಸ್ಕೃತಿ" ಎಂಬ ಪುಸ್ತಕದಿಂದ ಆಯಿದು ಬರೆದಿದ್ದೇನೆ

ಶಬ್ಧ ವಿಚಾರ:
ಸಂಸ್ಕೃತಿ ಎಂಬ ಮಾತು ಪೂರ್ವದಲ್ಲಿ (ಹಾಗು ಪುರಾತನ ಗ್ರಂಥಗಳಲ್ಲಿ) ಎಲ್ಲಿಯೂ ಬಳಕೆಯಲಿದ್ದಂತಿಲ್ಲ. ಆದರೆ ಅದಕ್ಕೆ ಸಂಬಂಧ ಪಟ್ಟ ಪದ "ಸಂಸ್ಕಾರ" ಬಳಕೆಯಲ್ಲಿದೆ. ಒಂದು ಹೊಸಾ ಮಾತು ನಮ್ಮಲ್ಲಿ ವಾಡಿಕೆಗೆ ಬರುತ್ತಿದ್ದರೆ ಒಂದು ಹೊಸ ಅಭಿಪ್ರಾಯ ನಮ್ಮ ಜೀವನದೊಳಗೆ ಪ್ರವೇಶಿಸುತ್ತಿದೆ ಎಂದು ಅರ್ಥ. ಆದರೆ ಸಂಸ್ಕೃತಿಯನ್ನು "ನವೀನ" ಭಾವ ಎನ್ನುವುದಕ್ಕಿಂತ "ವಿಸ್ತೃತ" ಭಾವ ಎನ್ನುವುದೇ ಉಚಿತ.

ಸಂಸ್ಕೃತಿ ಎಂದರೆ:
೧. ಬರಿಯ ವಿದ್ಯೆಯಲ್ಲ
೨. ಬರಿಯ ತಿಳುವಲಿಕೆಯಾಗಲಿ ವಸ್ತುವಿಜ್ಞಾನವಲ್ಲ
೩. ಬರಿಯ ಜಾನತನವು ಯುಕ್ತಿಯೂ ಅಲ್ಲ.
೪. ಬರಿಯ ಕಲಾಭಿರುಚಿಯೂ ಅಲ್ಲ

ಸಂಸ್ಕಾರದಿಂದ ಸಂಸ್ಕೃತಿ. ಸಂಸ್ಕಾರ ಅಥವಾ ಸಂಸ್ಕರಣ - ಸಮ್ಯಕ್ ಕರಣ - ಸಮ್ಯಕ್ ಕೃತಿ - ಸಂಸ್ಕೃತಿ, ಹಾಗೆಂದರೆ "ಚೆನ್ನಗುವಂತೆ" ಮಾಡುವುದು. ಅಥವಾ "ಒಳ್ಳೆಯದಾಗಿಸುವುದು". ಒಳ್ಳೆಯದು ಅಂದರೆ - ಒಂದಾನೊಂದು ಪದಾರ್ಥವು ಅಥವಾ ಸಂಗತಿಯು ಹೇಗಿರಬೇಕೋ ಹಾಗಿರುವುದು. ನಡೆ ನುಡಿಗಳ ಚೊಕ್ಕತನವೆ ಸಂಸ್ಕೃತಿ.

ಸಂಸ್ಕೃತಿಯ ಅಂಶಗಳು:

೧. ಜೀವನ ಸಂಧರ್ಭಗಳ ಯುಕ್ತಾಯುಕ್ತ ವಿವೇಚನೆ.
೨. ವಸ್ತುಗಳ ಮೌಲ್ಯ ತಾರತಮ್ಯ ಗಣನೆ.
೩. ಪರೀಂಗಿತ ಪರಿಜ್ಞಾನ
೪. ಸರಸತಾಭಿರುಚಿ
೫. ಧರ್ಮ ಚಿಂತನೆಯ ಜಾಗರೂಕತೆ
೬. ಆತ್ಮ ಶೋಧನೆ ಆತ್ಮ ಸಂಯಮ

ಆದರೆ ---
ಒಳ್ಳೆಯದು ಎಂಬುದಕ್ಕೆ ನಿರ್ದೇಶಸೂತ್ರ ಯಾವುದು? ಗುನಸಮನ್ವಯಕ್ಕೆ ಆದರ್ಶ ಯಾವುದು? ತಾರತಮ್ಯ ಗಣನೆಗೆ ಮೂಲ್ಯ ನಿರ್ಣಯಕ್ರಮ ಯಾವುದು?
"ಒಳ್" (ಉಳ್) ಎಂಬುದಕ್ಕೆ (೧) ಉಂಟಾಗಿರು (೨) ಒಳ್ಳೆಯದಾಗು ಎಂದು ಎರಡರ್ಥ. ಈ ಪದ ಸಂಸ್ಕೃತದ "ಸತ್" ತರಃ. ಯಾವುದು ಅಳಿಯದೆ ಬಾಳಬಲ್ಲದೋ (ಸತ್ಯವೋ) ಅದೇ ನಿಜವಾಗಿ "ಒಳ್ಳೆಯದು" . ಮನುಷ್ಯನಿಗೆ ಗೊತ್ತಿರುವ ವಸ್ತುಗಳಲ್ಲೆಲ್ಲ ಅವನ ಅಂತರಾತ್ಮವೇ ಸರ್ವ ಸತ್ಯ. ಆತ್ಮವೇ ಅವನ ಪಾಲಿಗೆ ಶಾಶ್ವತ, ಅದೇ ಸದ್ವಸ್ತು. ಆ ಅಂತರಾತ್ಮ ಕುರಿತ ಜ್ಞಾನವೇ ವನುಷ್ಯವೆಂಬ ಸೃಷ್ಟಿಯ ವೈಶಿಷ್ಟ್ಯ. ಮನುಷ್ಯನಲ್ಲಿ (ಪ್ರಕೃತಿಯಲ್ಲಿ) ಮೂರು ಗುಣಗಳು ಬೆರೆತುಕೊಂಡಿರುತ್ತದೆ (ಸತ್ವ, ರಜಸ್ಸು, ತಮಸ್ಸು). ಸತ್ವ ಗುಣ ಪ್ರಬಲವಾದಾಗ ಮನುಷ್ಯನ ಬುದ್ದಿ ಅಂತರಾತ್ಮದ ಕಡೆಗೆ ತಿರುಗುತ್ತದೆ (ಹೀಗೆ ಆತ್ಮದ ಕಡೆಗೆ ತಿರಿಗಿಸುವುದಕ್ಕೆ ನಡೆದುಕೊಂಡರೆ ಅದು ಧರ್ಮ). ಆದ್ದರಿಂದ:
" ಆತ್ಮವೇ - ಆತ್ಮೈಕ ದೃಷ್ಟಿಯೇ - ಆತ್ಮಸಾಕ್ಷಾತ್ಕಾರ ಸೌಲಭ್ಯ - ಜಗತ್ತಿನ ಈಲ್ಲಾ ವಿಷಯಗಳಲ್ಲಿಯೂ ನಮಗೆ ಮೌಲ್ಯ ತಾರತಮ್ಯವನ್ನು ನಿರ್ಧರಿಸುವ ಮಾಪಕವಾಗಿರಬೇಕಾದದ್ದು." - ಅದೇ ಸಂಸ್ಕೃತಿ ಬೀಜ.

ಸುಸಂಸ್ಕ್ರುತನು ಎಂಥವನು?

ಅವನ ಲಕ್ಷಣಗಳು ಮುಖ್ಯವಾಗಿ ಐದು:
೧. ಸ್ವಸ್ಥಾನ ಪರಿಜ್ಞಾನ - ತನ್ನ "ಜಾಗ" ಯಾವುದು ಎಂಬುದನ್ನು ಸರ್ವದಾ ಹುಡುಕಿ ಕಂಡುಕೊಳ್ಳುತ್ತಿರಬೇಕು. " A thing out of its place is dirt"
೨. ಪರೀಂಗಿತ ಪರಿಗ್ರಹಣ - ನಾವು ಮಾಡುವ ಕೆಲಸಗಳು (ಆಡುವ ಮಾತು) ಇತರರ ಮೇಲೆ ಹೇಗೆ ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದನ್ನೂ ಎಡೆಬಿಡದೆ ಚಿಂತಿಸುತ್ತಿರಬೇಕು.
೩. ಸ್ವಾರ್ಥ ನಿಯಮನ - ಸ್ವಾರ್ಥದ ಮಿತಿ (ಹದ್ದಿನಲ್ಲಿಡುವುದು).
೪. ಸಮನ್ವಯ ದೃಷ್ಟಿ - ನಾನಾ ಭೇಧಗಳನ್ನು, ಅಭಿಪ್ರಾಯಗಳನ್ನು, ಪರೀಕ್ಷಿಸಿ ಅವುಗಳ ಸತ್ಯಾಂಶಗಳನ್ನು ಶೇಖರಮಾಡುವುದು.
೫. ಸರಸತೆ - ಎಲ್ಲಾ ಸಂದರ್ಭಗಳಲ್ಲಿಯೂ ಸ್ವಾರಸ್ಯಕಣವನ್ನು ಹುಡುಕಿ ತೆಗೆಯುವ ಪ್ರವೃತ್ತಿ.

ಸುಸಂಸ್ಕ್ರುತನ ಕೈ ಬಾಯಿಗಳೂ ಅವಕ್ಕೆ ಹಿಂದಿರುವ ಮನಸ್ಸು ಬುದ್ದಿಗಳೂ ಸರ್ವದಾ ಅವನ ಹಿಡಿತದಲ್ಲಿರುತ್ತದೆ. ಆ ಇಂದ್ರಿಯನಿಯಂತ್ರಣವೇ ಆತ್ಮಸಂಯಮ. - ತನ್ನನ್ನು ತಾನೆ ಹದ್ದಿನಲ್ಲಿರಿಸಿಕೊಂದಿರುವುದು.

ಸಂಸ್ಕೃತಿ ಮತ್ತು ಪ್ರಕೃತಿ:

ಪ್ರಕೃತಿ ಎಂದರೆ ಸ್ವಭಾವ - ತಾನಾಗಿ ಉಂಟಾದದ್ದು. ಮನುಷ್ಯನ್ನು ಪ್ರಕೃತಿಯಿಂದ ಮೇಲ್ಮಟ್ಟಕ್ಕೆದ್ದಾಗ ಸಂಸ್ಕೃತಿ. ಪ್ರಕೃತಿಯೊಡನೆ ಪೌರುಷ ವಿವೇಕ ಬೆರೆತಾಗ ಸಂಸ್ಕೃತಿ. ಉದಾಹರಣೆಗೆ ಮಾತನಾಡಬೇಕೆನಿಸುವುದು ಪ್ರಕೃತಿ, ಅದರಲ್ಲಿ ಮಿತಿ ಮರ್ಯಾದೆಗಳು ಸಂಸ್ಕೃತಿ (ಬಹಿರಂಗದ ಸಂಸ್ಕೃತಿ). ಆಸೆ, ಮೋಹ, ರೋಷ, ಅಸೂಯೆ ಪ್ರಕೃತಿ. ನ್ಯಾಯ, ವಿವೇಕ, ಕ್ಷಮೆ, ಸಹನೆ ಸಂಸ್ಕೃತಿ (ಅಂತರಂಗದ ಸಂಸ್ಕೃತಿ).

ಸಾಧನೆ:

ಸಂಸ್ಕೃತಿಯ ಈ ನಾನ ಗುಣಗಳು ಬೆಳೆದು ದೃಢಪಡಿಸಲು ಬಹುಕಾಲದ ಪ್ರಯತ್ನವೂ ಅಭ್ಯಾಸವೂ ಬೇಕು. ಇದು ನಿಯಮ ಪಾಲನೆಯಿಂದಲೇ (ಧೀರ್ಘ, ಸಂತತ) ಸಾಧ್ಯ. ಆ ನಿಯಮಪಾಲನೆಗೆ ಮನಸ್ಸು ಹಾಗು ಬುದ್ದಿ ಎರಡು ಸಹಕರಿಸಬೇಕು. ಮನಸ್ಸು ಬುದ್ದಿಗಿಂತ ಹೆಚ್ಚು ಪರಿಣಾಮಕಾರಿ. ಆದ್ದರಿಂದ ಸಂಸ್ಕೃತಿ ಪ್ರಿಯನು ಮೊದಲು ಹದಗೊಳಿಸಬೇಕಾದ ಉಪಕರಣ ಮನಸ್ಸು. ಮನಸ್ಸನ್ನು ಹದ ಪಡಿಸುವ ಸಾಧನೆಗಳು - ಸತ್ಕಲೆ ಸತ್ಸಹವಾಸಗಳು. ಸತ್ - ಕಲೆ, ಕಾವ್ಯ, ಸಂಗ, ಕೃತಿ, - ಇಂದ ಜೀವ ಪರಿಪಾಕವಾಗುತ್ತದೆ. ನಮ್ಮ ಅಂತಃಕರಣ ದೃಷ್ಟಿ ಸೂಕ್ಷ್ಮವಾಗುತ್ತದೆ.

ಮನುವಾಕ್ಯ:

ಯಾವ ಸತ್ಯಾಕಾಂಕ್ಷೆಯು ಎಲ್ಲಾ ಕಡೆಯಿಂದಲ್ಲೂ ಜ್ಞಾನವನ್ನು ಅರಿಸುತ್ತಿದೆಯೋ. ಯಾವ ಕೆಲಸವನ್ನು ಮಾಡೋಣವಾದರಿಂದ, ಯಾವ ನಡವಳಿಕೆಯನ್ನು ನಡೆಯೋಣವಾದರಿಂದ, ಎಂದಿಗೂ ನಾಚಿಕೆ ಪದಬೇಕಾಗಲಾರದೋ ಮತ್ತು ಯಾವುದರಿಂದ ಅಂತರಾತ್ಮಕ್ಕೆ ಸಮಾಧಾನವಗುತ್ತದೆಯೋ ಅದು ಸಾತ್ವಿಕತೆಯ ಗುರುತು. - ಸಂಸ್ಕೃತಿ ಎಂದರೆ ಇದೇ ಅಲ್ಲವೇ?

Monday, November 5, 2007

About Karma - Intro.

ಈ ಭಾಗವನ್ನು "ಜೀವನ ಧರ್ಮ ಯೋಗ"ದ ಅಧ್ಯಾಯ ೩ (ಪ್ರಕರಣ ೪) ಯಿಂದ ಆಯಿದು ಬರೆದಿದ್ದೇನೆ.

ಕರ್ಮ ಎಂದರೆ ಕೆಲಸ. ಕರ್ಮ ಎರಡು ವಿಧ : (೧)ಪ್ರಾಕೃತ - ಅಪ್ರಯತ್ನವಾಗಿ ನಡೆಯುವ ಕೆಲಸಗಳು (ಪ್ರಾಣ ಕ್ರಿಯೆಗಳು) (೨) ಸ್ವಕೃತ - ಬುದ್ದಿಪೂರ್ವಕವಾಗಿ ಮಾಡುವ ಕೆಲಸಗಳು. ಇವು ಎರಡು ವಿಧ: (೨.೧) ಸತ್ಕರ್ಮ (೨.೨) ದುಷ್ಕರ್ಮ. ಈ ಎಲ್ಲ ಕರ್ಮಗಳಲ್ಲೂ ಮೂರು ವಿಧ: (ಅ) ಕರ್ಮ - ವಿಹಿತವಾದದ್ದನ್ನು ಮಾಡುವುದು (ಆ) ಅಕರ್ಮ - ಮಾಡದೆ ಬಿಡುವುದು; ಮಾಡಿದರೂ ಮಾಡದಂತಿರುವುದು (ಇ) ವಿಕರ್ಮ - ಹೇಗೆ ಮಾಡಬೇಕೋ ಹಾಗಲ್ಲದೆ ಬೇರೆ ರೀತಿ ಮಾಡುವುದು.

ಸತ್ಕರ್ಮ (೨.೧) ವೇ ಧರ್ಮ. ಇದರಲ್ಲಿ ಮೂರು ವಿಧ: ಮೊದಲನೆಯದು (೨.೧.೧) ಲೌಕಿಕ - ಲೋಕಸಾಮಾನ್ಯವಾದ ನೀತಿ (ಅಹಿಂಸೆ, ಶೌಚ, ಕ್ಷಮೆ, ವಿದ್ಯೆ). ಎರಡನೆಯ ಸತ್ಕರ್ಮ (೨.೧.೨) ವೈದಿಕ - ಇದರಲ್ಲಿ ಎರಡು ರೂಪ (೨.೧.೨.೧) ಸಂಸ್ಕಾರ - (ತೀರ್ಥ ಸ್ನಾನ, ವೇದಾಭ್ಯಾಸ, ವಿವಾಹ, ಕ್ಷೇತ್ರವಾಸ) (೨.೧.೨.೨) ಸಾಧನ - ಇವು ಮೂರು: ಯಜ್ಞ (ಅಂದರೆ ಪೂಜೆ - ಇನ್ನೊಬ್ಬರಿಗೆ ಸಂತೋಷಪಡಿಸಲು ನಾವು ಮಾಡುವ ಎಲ್ಲಾ ಕೆಲಸವೂ ಯಜ್ಞ) , ದಾನ (ದಾನ ಮಾಡಿದ ವಸ್ತುವಿನಲ್ಲಿ "ತನ್ನದು" ಎಂದು ಹೋಗಿ "ನ ಮಾಮ" ಸೇರಬೇಕು), ತಪಸ್ಸು (ಒಂದು ಮಹಾ ಉದ್ದೇಶಕ್ಕಾಗಿ ಸಂತತ ಪರಿಶ್ರಮ ಮಾಡುವುದು). ಮೂರನೆಯ ಸತ್ಕರ್ಮ (೨.೧.೩) ಪಾರಮಾರ್ಥಿಕ - ಪ್ರತಿಫಲದ ಅಪೇಕ್ಷೆ ಇಲ್ಲದೆ ಮಾಡುವ ಕೆಲಸ.

ಕರ್ಮವೆಂದರೆ "ಕರ್ಮಫಲ" ವೆಂದೂ ಅರ್ಥ ಉಂಟು. ಶಾಸ್ತ್ರವಿಚಾರವಿಹಿತವಾದ ಕರ್ಮದ ಅನುಷ್ಠಾನ ಮುಖ್ಯ.
ಕರ್ಮಕ್ಕೆ ಸ್ವತಂತ್ರ ಗುಣಗಳಿಲ್ಲ, ಅದು ಕರ್ಮಿಯನ್ನು ಅನುಸರಿಸುತ್ತದೆ. ಮನುಷ್ಯನ ಅಂತರಂಗವು ಬಹಿರಂಗದ ಮೂಲಕ ಹರಿದಾಗ ಅದು ಕರ್ಮವೆನಿಸುತ್ತದೆ. ನಾವು ಮಾಡುವ ಕೆಲಸ ನಮ್ಮ ಇಷ್ಟಾರ್ಥಸಾಧನೆಗಾಗಿಯೇ ಆದರೂ ಅದು ಯಜ್ಞವೆಂಬ, ಭಗವತ್ಸೇವೆ ಎಂಬ ಭಾವನೆಯಿಂದ ಮಾಡಿದರೆ ನಮ್ಮ ಅಹಂಭಾವ ಅಣಗಿ ಜೀವ ಶುದ್ದವಾಗುತ್ತದೆ.

Sunday, November 4, 2007

About this Blog.

ನಮಸ್ಕಾರ, ಈ ಬ್ಲಾಗ್ ನ ವಿಷಯ ಡಿ. ವಿ. ಜಿ. ಅವರ ಸಾಹಿತ್ಯ ಮತ್ತು ಆ ಸಾಹಿತ್ಯದಲ್ಲಿ ಬರುವತಕ್ಕಂತಹ ವಿಷಯಗಳು. ಅವರ ಸಾಹಿತ್ಯದ ವಿಮರ್ಶೆ ಮಾಡಲು ಅವಶ್ಯವಾದ ಜ್ಞಾನವಾಗಲಿ ಅಥವಾ ಅನುಭವವಾಗಲಿ ನನ್ನಲ್ಲಿ ಇಲ್ಲ. ಅವರು ಬರೆದಿರುವ ಪುಸ್ತಕಗಳನ್ನ ಓದಿ, ಮತ್ತು ಆ ವಿಷಯಕ್ಕೆ ಸಂಬಂಧಪಟ್ಟ ಬೇರೆ ಪುಸ್ತಕಗಳನ್ನ ಓದಿ, ನನಗೆ ಅನಿಸಿದ್ದನ್ನು ಇಲ್ಲಿ ಬರಿಯೋ ಉದ್ದೇಶ. ಡಿ ವಿ ಜಿ ಅವರ ಸಾಹಿತ್ಯ ಓದಲು ಶುರು ಮಾಡಿ ಸುಮಾರು 4 ವರ್ಷ ಆಯಿತು. ಇದಕ್ಕೆ ನನಗೆ ಪರಿಚಯಿಸಿದವನು ನನ್ನ ಸ್ನೇಹಿತ ರವಿ ಶಂಕರ್. ನಾನು ಓದಿರುವ ಡಿ ವಿ ಜಿ ಪುಸ್ತಕಗಳು:
1. ಮಂಕುತಿಮ್ಮನ ಕಗ್ಗ
2. ಮರಳು ಮುನಿಯನ ಕಗ್ಗ
3. ಶ್ರೀಮಧ್ಬಗವಧ್ಗೀತ ತಾತ್ಪರ್ಯಾ ಅಥವಾ ಜೀವನ ಧರ್ಮ ಯೋಗ
4. ಸೌಂದರ್ಯ ಮತ್ತು ಸಾಹಿತ್ಯ
5. ಋತ ಸತ್ಯ ಮತ್ತು ಧರ್ಮ
6. ಬಾಳಿಗೊಂದು ನಂಬಿಕೆ
7. ಸಂಸ್ಕೃತಿ
8. ದೇವರು
9. ಪುರುಷಸೂಕ್ತ
10. ಮೈಸೂರಿನ ದಿವಾನರು
11. ಸಾಹಿತ್ಯ ಶಕ್ತಿ